ಒಂದು ಕ್ಷಮಾಪಣೆ ಕೇಳಬೇಕಿದೆ. ಮೇ ತಿಂಗಳಲ್ಲಿ ಬರಬೇಕಿದ್ದ ಪತ್ರಿಕೆ ಈಗ ಜುಲೈನಲ್ಲಿ ಹೊರಬರುತ್ತಿದೆ!
‘ಕಲರವ’ದ ಹಿಂದಿನ ಸಂಚಿಕೆ ಪ್ರಕಟವಾಗಿ ಎರಡು ತಿಂಗಳು ಕಳೆದಿವೆ. ನಿಮ್ಮ ಸಿಟ್ಟು ನ್ಯಾಯಯುತವಾದದ್ದೇ. ಆದರೂ ಪತ್ರಿಕೆ ಹೀಗೆ ಹೇಳದೇ ಕೇಳದೆ ಪ್ರಕಟವಾಗುವುದು ನಿಂತು ಹೋದರೆ ಏಳುವ ಸಹಜ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾಗಿದೆ.
ನಿಮಗೆ ತಿಳಿದಂತೆ ಇದು ವೃತ್ತಿಪರ ಪತ್ರಿಕೆಯಲ್ಲ. ಹಾಗಂತ ಇದರಲ್ಲಿ ಬರೆಯುವವರನ್ನು ಹವ್ಯಾಸಿ ಬರಹಗಾರರು ಎಂದು ಕರೆಯಲು ಸಹ ಸಾಧ್ಯವಾಗುವುದಿಲ್ಲ. ಬರವಣಿಗೆಯ ಹಾದಿಯಲ್ಲಿ ಅಂಬೆಗಾಲಿಡುತ್ತಾ, ತೊಡರುತ್ತಾ, ಎಡವಿ ಬೀಳುತ್ತಾ, ಸಂತೈಸಿಕೊಳ್ಳುತ್ತಾ ಮುಂದೆ ಸಾಗುವ ಹುಮ್ಮಸ್ಸನ್ನು ಉಳಿಸಿಕೊಂಡಿರುವ ಹುಡುಗ-ಹುಡುಗಿಯರ ತಂಡ ನಮ್ಮದು. ಪತ್ರಿಕೆಯೊಂದರ ಜೀವಂತಿಕೆ ಅದಕ್ಕೆ ಬರೆಯುವವರ ಆಸಕ್ತಿ ಹಾಗೂ ಶ್ರದ್ಧೆಯನ್ನು ಅವಲಂಬಿಸುತ್ತಿರುತ್ತದೆ. ಅದಿಲ್ಲದೆ ಹೋದರೆ ಸಂತೆ ಹೊತ್ತಿಗೆ ಮೊಳ ಹೂವು ನೇಯುವ ನಿರ್ಲಜ್ಜ ಅನಿವಾರ್ಯತೆ ಸೃಷ್ಠಿಯಾಗುತ್ತದೆ. ಈ ತೊಂದರೆಗಳಿಂದಾಗಿ ಎರಡು ತಿಂಗಳು ನಮ್ಮ ಗೆಳೆಯರ ನಡುವೆ ಪತ್ರಿಕೆಯ ‘ಸಡಗರ’ವಿರಲಿಲ್ಲ. ಸಂತೋಷದ ಸಂಗತಿಯೆಂದರೆ ಈ ಸಂಚಿಕೆಯ ತಯಾರಿಯಲ್ಲಿ ಎಲ್ಲರ ಶ್ರದ್ಧೆ, ಆಸಕ್ತಿಗಳು ಪಾಲ್ಗೊಂಡಿವೆ. ಕೆಲವು ಗಮನಾರ್ಹ ಬದಲಾವಣೆಗಳನ್ನು ಪತ್ರಿಕೆಯ ಹೂರಣದಲ್ಲಿ ನೀವು ಗಮನಿಸಬಹುದು. ಹೊಸ ಬರಹಗಾರರು ನಿಮಗೆ ಪರಿಚಯವಾಗುತ್ತಿದ್ದಾರೆ. ನಿಮ್ಮ ಪ್ರೀತಿ ಇರಲಿ.
ಈ ಸಂಚಿಕೆಯಲ್ಲಿ ಎರಡು ಹೊಸತನದ ಧಾರಾವಾಹಿಗಳು ಶುರುವಾಗುತ್ತಲಿವೆ. ಟಿವಿ ಮಾಧ್ಯಮಗಳ ಹಾವಳಿಯ ಈ ಸಂದರ್ಭದಲ್ಲಿ ‘ಧಾರಾವಾಹಿ’ ಎಂಬ ಪದವನ್ನೇ ಬಳಸಲು ಮುಜುಗರವಾಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ಧಾರಾವಾಹಿಗಳು ಮೂಡಿ ಬರುತ್ತವೆ. ಆರ್.ವಿ.ಸಿ.ಇ ಕಾಲೇಜಿನ ಗೆಳೆಯ ಕಾರ್ತಿಯೇಯ ಭಟ್ ‘ಬೇರು ಚಿಗುರು’ ಬರೆಯುತ್ತಿದ್ದಾರೆ. ಇನ್ನು ಹಿಂದಿನ ಸಂಚಿಕೆಯಲ್ಲಿ ತಿಳಿಸಿದ ಹಾಗೆ ಅಂತರ್ಮುಖಿಯವರ ‘ಎದೆಯ ದನಿ’ ಪ್ರಕಟವಾಗಿದೆ. ನಿಮಗಿಷ್ಟವಾಗುತ್ತವೆ ಎಂಬ ನಂಬಿಕೆ ನಮ್ಮದು.
-ಸುಪ್ರೀತ್.ಕೆ.ಎಸ್

ಲೋಡ್ ಆಗುತ್ತಿದೆ......